
ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರವು ಹೊಸ ವಕ್ಫ್ ಕಾನೂನನ್ನು ಜಾರಿಗೆ ತರಲು ಮುಂದಾಗಿದ್ದು, ಇದಕ್ಕೆ ಹಿನ್ನಡೆಯಾಗಿದೆ. ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕಾರಗೊಂಡ ವಕ್ಫ್ ತಿದ್ದುಪಡಿ ಮಸೂದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಒಟ್ಟು 72 ಅರ್ಜಿಗಳು ಸಲ್ಲಿಕೆಯಾಗಿವೆ.
ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ನೇತೃತ್ವದ ಪೀಠವು ಈ 72 ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿತು. ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಗಂಭೀರವಾದ ಪ್ರಶ್ನೆಗಳನ್ನು ಕೇಳಿದೆ. ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರಿಗೆ ಅವಕಾಶ ನೀಡಲಾಗುವುದಾದರೆ, ಹಿಂದೂ ಧಾರ್ಮಿಕ ದತ್ತಿಗಳಲ್ಲಿ ಮುಸ್ಲಿಮರಿಗೆ ಅವಕಾಶ ನೀಡಲಾಗುತ್ತದೆಯೇ ಎಂದು ನ್ಯಾಯಾಲಯವು ಪ್ರಶ್ನಿಸಿದೆ. ವಿಚಾರಣೆಯ ಸಮಯದಲ್ಲಿ, ಮಂಡಳಿಗೆ ಮುಸ್ಲಿಮೇತರರ ನೇಮಕಾತಿ ಸೇರಿದಂತೆ ಕೆಲವು ಅಂಶಗಳಿಗೆ ತಡೆ ನೀಡಿ ಮಧ್ಯಂತರ ಆದೇಶವನ್ನು ನೀಡುವ ಬಗ್ಗೆ ಸುಪ್ರೀಂ ಕೋರ್ಟ್ ಸುಳಿವು ನೀಡಿದೆ.
ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ನ್ಯಾಯಾಲಯವು ಹಲವು ಪ್ರಶ್ನೆಗಳನ್ನು ಕೇಳಿತು. “ವಕ್ಸ್ ಬೈ ಯೂಸರ್” (ಹಿಂದಿನಿಂದಲೂ ವಕ್ಫ್ ಮಂಡಳಿಯು ಅನುಭವಿಸಿಕೊಂಡು ಬಂದಿರುವ) ಆಸ್ತಿಯನ್ನು ನೀವು ಹೇಗೆ ದಾಖಲು ಮಾಡಿಕೊಳ್ಳುತ್ತೀರಿ? ಅವರ ಬಳಿ ಯಾವ ರೀತಿಯ ದಾಖಲೆಗಳಿವೆ? ಒಂದು ವೇಳೆ ನೀವು ಆಸ್ತಿಗಳನ್ನು ಡಿನೋಟಿಫೈ (ವಕ್ಫ್ನಿಂದ ತೆಗೆದುಹಾಕುವುದು) ಮಾಡುತ್ತಾ ಹೋದರೆ ಏನಾಗಬಹುದು? ಎಂದು ನ್ಯಾಯಪೀಠವು ಪ್ರಶ್ನಿಸಿತು.
ಇದನ್ನೂ ಓದಿ: ನಾನು ಬಾಂಗ್ಲಾ ಪಿಎಂ ಮೊಹ್ಮದ್ ಯೂನುಸ್ ಅಭಿಮಾನಿ! ಡಿಕೆಶಿ
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು, “ವಕ್ಫ್ ವಿಚಾರದಲ್ಲಿ ಕೆಲವು ಪ್ರಕರಣಗಳಲ್ಲಿ ದುರ್ಬಳಕೆ ಆಗಿರುವುದು ನಿಜ. ಆದರೆ, ಕೆಲವು ನೈಜ ಪ್ರಕರಣಗಳೂ ಇವೆ. ನಾನು ಹಿಂದಿನ ತೀರ್ಪುಗಳನ್ನು ಪರಿಶೀಲಿಸಿದ್ದೇನೆ. ‘ವಕ್ಸ್ ಬೈ ಯೂಸರ್’ ಅನ್ನು ನ್ಯಾಯಾಲಯವು ಮಾನ್ಯ ಮಾಡುತ್ತದೆ. ಒಂದು ವೇಳೆ ‘ವಕ್ಸ್ ಬೈ ಯೂಸರ್’ ಅನ್ನು ರದ್ದುಪಡಿಸಿದರೆ ಸಮಸ್ಯೆಯಾಗಬಹುದು.
ಶಾಸಕಾಂಗಕ್ಕೆ ನ್ಯಾಯಾಲಯದ ತೀರ್ಪು ಅಥವಾ ಆದೇಶವನ್ನು ನೀಡಲು ಅಥವಾ ಅದನ್ನು ಅನೂರ್ಜಿತ ಎಂದು ಹೇಳಲು ಅವಕಾಶವಿಲ್ಲ” ಎಂದು ಅಭಿಪ್ರಾಯಪಟ್ಟಿತು. ಇದರರ್ಥ, ಹಿಂದಿನಿಂದಲೂ ವಕ್ಫ್ ಮಂಡಳಿಯ ಅನುಭವದಲ್ಲಿರುವ ಆಸ್ತಿಗಳನ್ನು ದಾಖಲಿಸುವ ಮತ್ತು ಅವುಗಳನ್ನು ಡಿನೋಟಿಫೈ ಮಾಡುವ ಪ್ರಕ್ರಿಯೆಯ ಬಗ್ಗೆ ನ್ಯಾಯಾಲಯವು ಕಳವಳ ವ್ಯಕ್ತಪಡಿಸಿದೆ, ಮತ್ತು ಶಾಸಕಾಂಗವು ನ್ಯಾಯಾಂಗದ ತೀರ್ಪಿನ ಮೇಲೆ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರನ್ನು ನೇಮಿಸುವ ಅವಕಾಶದ ಬಗ್ಗೆ ನ್ಯಾಯಾಲಯವು ಪ್ರಶ್ನಿಸಿದಾಗ, ಸರ್ಕಾರದ ಪರ ವಕೀಲರು ಹುದ್ದೆಯ ಆಧಾರದ ಮೇಲೆ ನೇಮಕಗೊಳ್ಳುವ ಅಧಿಕಾರಿಗಳನ್ನು ಹೊರತುಪಡಿಸಿ ಕೇವಲ ಇಬ್ಬರು ಮುಸ್ಲಿಮೇತರರನ್ನು ಮಾತ್ರ ನೇಮಕ ಮಾಡಬಹುದು ಎಂದು ವಾದಿಸಿದರು. ಆದರೆ ಸುಪ್ರೀಂ ಕೋರ್ಟ್ ಈ ವಾದವನ್ನು ಒಪ್ಪಲಿಲ್ಲ. ಹೊಸ ಕಾನೂನಿನ ಪ್ರಕಾರ, ಕೇಂದ್ರ ವಕ್ಫ್ ಮಂಡಳಿಯ 22 ಸದಸ್ಯರಲ್ಲಿ ಕೇವಲ 8 ಜನರು ಮಾತ್ರ ಮುಸ್ಲಿಮರಾಗಿರಬಹುದು.
ಈ 8 ಜನರಲ್ಲಿಯೂ ಇಬ್ಬರು ನ್ಯಾಯಾಧೀಶರಾಗಿದ್ದು, ಅವರು ಮುಸ್ಲಿಮೇತರರೂ ಆಗಿರಬಹುದು. ಹೀಗಾದಲ್ಲಿ ಮಂಡಳಿಯಲ್ಲಿ ಮುಸ್ಲಿಮೇತರರೇ ಬಹುಸಂಖ್ಯಾತರಾಗುತ್ತಾರೆ. ಇದು ಹೇಗೆ ಧಾರ್ಮಿಕ ಸ್ವರೂಪವನ್ನು ಉಳಿಸಿಕೊಳ್ಳುತ್ತದೆ ಎಂದು ನ್ಯಾಯಾಲಯವು ಪ್ರಶ್ನಿಸಿತು. ಈ ವಿಷಯದ ಬಗ್ಗೆ ಸಮಗ್ರವಾದ ಉತ್ತರ ನೀಡಲು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ಕಾಲಾವಕಾಶವನ್ನು ಕೋರಿದೆ.