ವಿರೋಧ ಪಕ್ಷಗಳಿಗೆ ಪ್ರಮುಖ ಅಸ್ತ್ರವಾಗಿ ಪರಿಣಮಿಸಿರುವ ಮತ್ತು ಕರ್ನಾಟಕ ಸರ್ಕಾರಕ್ಕೆ ತಲೆನೋವಾಗಿರುವ ಜಾತಿಗಣತಿಯ ಮತ್ತಷ್ಟು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. 2015ರ ಸಮೀಕ್ಷೆಯ ಜನಸಂಖ್ಯೆಯ ಲೆಕ್ಕಾಚಾರದ ನಂತರ, ಇದೀಗ ಯಾವ ಸಮುದಾಯದ ಜನಸಂಖ್ಯೆ ಎಷ್ಟು ಹೆಚ್ಚಾಗಿದೆ ಎಂಬ ಸ್ಪೋಟಕ ಅಂಶ ಬಯಲಾಗಿದೆ. ಅದರಲ್ಲೂ ಕಳೆದ 30 ವರ್ಷಗಳಲ್ಲಿ ಮುಸ್ಲಿಂ ಜನಸಂಖ್ಯೆಯು ಸುಮಾರು ಶೇ 90ರಷ್ಟು ಏರಿಕೆಯಾಗಿರುವ ವಿಷಯ ಸೋರಿಕೆಯಾಗಿದೆ.
1984ರಲ್ಲಿ ವೆಂಕಟಸ್ವಾಮಿ ಆಯೋಗ ನಡೆಸಿದ್ದ ಸಮೀಕ್ಷೆಯ ಪ್ರಕಾರ 61 ಲಕ್ಷವಿದ್ದ ವೀರಶೈವ ಲಿಂಗಾಯತ ಸಮುದಾಯವು ಅಂದು ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿತ್ತು. ಆದರೆ, 2015ರ ಕಾಂತರಾಜು ಆಯೋಗದ ಸಮೀಕ್ಷೆಯ ಪ್ರಕಾರ ಅವರ ಸಂಖ್ಯೆ 66 ಲಕ್ಷಕ್ಕೆ ಏರಿಕೆಯಾದರೂ, ಜನಸಂಖ್ಯೆಯ ಶೇಕಡಾವಾರು ಪ್ರಮಾಣ ಕೇವಲ 8.50ರಷ್ಟು ವೃದ್ಧಿಯಾಗಿ ಮೂರನೇ ಸ್ಥಾನಕ್ಕೆ ಕುಸಿದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ಅವಧಿಯಲ್ಲಿ, 57 ಲಕ್ಷವಿದ್ದ ಪರಿಶಿಷ್ಟ ಜಾತಿ (ಎಸ್ಸಿ) ಸಮುದಾಯದ ಜನಸಂಖ್ಯೆ ಸುಮಾರು 90% ರಷ್ಟು ಹೆಚ್ಚಾಗಿ 1 ಕೋಟಿಗೆ ತಲುಪಿದೆ. ಹಾಗೆಯೇ, 1984ರಲ್ಲಿ ಕೇವಲ 39 ಲಕ್ಷವಿದ್ದ ಮುಸ್ಲಿಂ ಸಮುದಾಯದ ಜನಸಂಖ್ಯೆಯು ಕಾಂತರಾಜು ಆಯೋಗದ ವರದಿ ಪ್ರಕಾರ 76 ಲಕ್ಷಕ್ಕೆ ಏರಿಕೆಯಾಗಿದ್ದು, ಬರೋಬ್ಬರಿ ಶೇ 94 ರಷ್ಟು ಹೆಚ್ಚಳ ದಾಖಲಿಸಿದೆ.
ಇದನ್ನೂ ಓದಿ: ಹೆತ್ತವರ ತ್ಯಜಿಸಿ ಸರಿಗಮಪ ಖ್ಯಾತಿ ಪೃಥ್ವಿ ಭಟ್ ಲವ್ ಮ್ಯಾರೇಜ್!
1984ರಲ್ಲಿ ರಾಜ್ಯದ ಜನಸಂಖ್ಯೆಯ ಸುಮಾರು 17% ರಷ್ಟಿದ್ದ ಲಿಂಗಾಯತ ಸಮುದಾಯವು ಈಗ ಮೂರನೇ ಸ್ಥಾನಕ್ಕೆ ಇಳಿದಿದೆ ಎಂದು ಬಹಿರಂಗಗೊಂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವರದಿಯು ಲಿಂಗಾಯತರಿಗೆ ಮೂರನೇ ಸ್ಥಾನ ನೀಡಿ, ಮುಸ್ಲಿಮರಿಗೆ ಎರಡನೇ ಸ್ಥಾನ ಮತ್ತು ಪರಿಶಿಷ್ಟ ಜಾತಿಗಳನ್ನು ಅತಿ ದೊಡ್ಡ ಸಮುದಾಯವೆಂದು ವರ್ಗೀಕರಿಸಿದೆ. ಆದರೆ, ಇತರ ಸಮುದಾಯಗಳ ಜನಸಂಖ್ಯೆಯು ನಿಧಾನಗತಿಯಲ್ಲಿ ಏರಿಕೆ ಕಾಣುತ್ತಿದ್ದರೂ, ಕೇವಲ 30 ವರ್ಷಗಳಲ್ಲಿ ಮುಸ್ಲಿಂ ಜನಸಂಖ್ಯೆಯು ಸುಮಾರು 90% ರಷ್ಟು ಏಕಾಏಕಿ ಹೇಗೆ ಬೆಳೆಯಿತು ಎಂಬುದು ಈಗಿರುವ ಮುಖ್ಯ ಪ್ರಶ್ನೆಯಾಗಿದೆ.
ವಿರೋಧ ಪಕ್ಷವಾದ ಬಿಜೆಪಿ, ಮುಸ್ಲಿಂ ಜನಸಂಖ್ಯೆಯಲ್ಲಿನ ಈ ಅಸಾಧಾರಣ ಹೆಚ್ಚಳವನ್ನು ಪ್ರಶ್ನಿಸುತ್ತಿದ್ದು, ಜಾತಿಗಣತಿಯ ಮೂಲ ಪ್ರತಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆಯಲ್ಲಿದೆ. ಈ ವರದಿಯು ನಕಲಿ ಮತ್ತು ಬೋಗಸ್ ಎಂದು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಇದಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದೆ. ಆದ್ದರಿಂದ ಜಾತಿ ಗಣತಿಯನ್ನು ಮುನ್ನೆಲೆಗೆ ತಂದು ಜಾತಿಗಳ ನಡುವೆ ಸಂಘರ್ಷ ಹುಟ್ಟುಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ. ಇದಕ್ಕೆ ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನಾಯಕರು ಎಷ್ಟೇ ಸಮರ್ಥನೆ ನೀಡಿದರೂ, ಜಾತಿಗಣತಿಗೆ ಸ್ವಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ಎಂಎಲ್ಸಿ ನಾಗರಾಜ್ ಯಾದವ್ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು, ಗೊಲ್ಲ, ಕಾಡುಗೊಲ್ಲ, ಯಾದವ ಸಮುದಾಯಗಳ ವಿಚಾರವಾಗಿ ಆಕ್ಷೇಪಣೆ ಎತ್ತಿದ್ದಾರೆ. ಕಾಡುಗೊಲ್ಲ ಸಮುದಾಯದ ಜನಸಂಖ್ಯೆಯನ್ನು 3,20,853 ಎಂದು ತೋರಿಸಲಾಗಿದೆ. ಆದರೆ, ಈ ಸಂಖ್ಯೆಗಿಂತ ಹೆಚ್ಚಿನ ಜನರಿದ್ದಾರೆ. ಹೀಗಾಗಿ, ಇದನ್ನು ಸರಿಪಡಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ಸ್ಕಾಟ್ಲೆಂಡ್ ಸಂಸತ್ತು! ಹಿಂದೂಫೋಬಿಯಾ ವಿರುದ್ಧ ನಿರ್ಣಯ!
ಅಭಿಷೇಕ್ ಅವರು ಮಾಧ್ಯಮ ಕ್ಷೇತ್ರದಲ್ಲಿ ನಾಲ್ಕು ವರ್ಷದ ಅನುಭವ ಹೊಂದಿರುವ ಅನುಭವಸಂಪನ್ನ ಪತ್ರಕರ್ತ. ತಾಜಾ ಸುದ್ದಿ ಸಂಗ್ರಹಣೆ, ವರದಿಗಾರಿಕೆ, ಸಂದರ್ಶನ ಮತ್ತು ವಿವಿಧ ಪ್ರಸ್ತುತ ವಿಷಯಗಳ ವಿಶ್ಲೇಷಣೆಯಲ್ಲಿ ಅವರು ಪರಿಣತಿ ಹೊಂದಿದ್ದಾರೆ. ಓದುಗರಿಗೆ ಆಕರ್ಷಕ ಮತ್ತು ಮಾಹಿತಿಪೂರ್ಣ ವಿಷಯವನ್ನು ತಲುಪಿಸುವುದು ಅವರ ಬರವಣಿಗೆಯ ಮುಖ್ಯ ಲಕ್ಷಣ.
