
ಗುರು ಪೂರ್ಣಿಮಾ 2023
ಗುರುಪೂರ್ಣಿಮೆ: ವ್ಯಾಸಪೂಜೆಯ ಮಹತ್ವಗುರುವೆಂದರೆ ಬೆಳಕು. ತಾಪವಿರದ ಬೆಳಕು.
ಜ್ಞಾನ ದೀಪವನ್ನು ತಾನೂ ಕಂಡು ಜೀವಿಯೊಳಗೆ ಬೆಳಗುವ, ಅಮರ ಜ್ಯೋತಿಯನ್ನು ತೋರಿಸಿ ಅರೆ ಜೀವನಕ್ಕೆ ಅರಿವು ತುಂಬುವ ಬೆಳಕು. [ಗುರು ಪೂರ್ಣಿಮಾ 2023]
ಗುರುವೆಂದರೆ ಪರಮಾತ್ಮನ ಕರುಣೆಯ ಕಿರಣ.
ಹೇಗೆ ಪ್ರಭಾಕರನ ಪ್ರಭೆಯು ಮಲಿನ ಜಲವನ್ನೂ ಸ್ಪರ್ಶಿಸಿ ಕೆಸರಿನಲ್ಲಿನ ಕಮಲವನ್ನೂ ಅರಳಿಸಬಲ್ಲದೋ, ಹಾಗೆಯೇ ಗುರುವಿನ ದಿವ್ಯ ದೃಷ್ಟಿ ಸಂಸಾರಪಂಕದಲ್ಲಿ ಬಿದ್ದು ತೊಳಲಾಡುವ ಜೀವಕುಸುಮರ ಬದುಕನ್ನು ಅರಳಿಸಿ ಹಸನಾಗಿಸಬಲ್ಲದು.
ಬೀಜದಲ್ಲಿ ವೃಕ್ಷದ ಎಲ್ಲಾ ಭಾಗಗಳೂ ಅಡಗಿದ್ದರೂ ಕೃಷಿಯೆಂಬ ಸಂಸ್ಕಾರಕ್ಕೆ ಒಳಪಟ್ಟಾಗ ಮಾತ್ರ ಅದರ ಒಳರೂಪಗಳೆಲ್ಲವೂ ಪ್ರಕಾಶಕ್ಕೆ ಬರುವಂತೆ ಗುರುವೂ ಕೂಡ ಶಿಷ್ಯನ ಹೃದಯದಲ್ಲಿ ಸಂಸ್ಕಾರದ ಬೀಜವನ್ನು ಬಿತ್ತಿ ವಿದ್ಯಾವ್ಯವಸಾಯ ಮಾಡಿದಾಗ ಮಾತ್ರ ವ್ಯಕ್ತಿಯು ಪೂರ್ಣನಾಗಲು, ಪರಿಪಕ್ವನಾಗಲು ಸಾಧ್ಯ.
“ಎಲ್ಲ ಗ್ರಹಗಳಿಗಿಂತ ಹೆಚ್ಚಿನ ಶಕ್ತಿ ಗುರುವಿಗೆ. ಅನಿಷ್ಟವನ್ನು ದೂರ ಮಾಡುವುದೊಂದು ಮಾತ್ರವಲ್ಲ, ಇಷ್ಟವನ್ನು ಕೊಡುವುದರಲ್ಲಿಯೂ, ಶುಭ-ವರ್ಧನದಲ್ಲಿ, ಬೇರೆಲ್ಲ ಗ್ರಹಕ್ಕಿಂತ ಹೆಚ್ಚಿನ ಶಕ್ತಿ ಗುರುವಿಗಿದೆ.”
ಗುರುವಿನ ದಿನ ಪೂರ್ಣಿಮೆಯಂದೇ ಏಕೆ? ಗುರು ಪೂರ್ಣಿಮಾ 2023
ಗುರುವೆಂದರೆ ಪೂರ್ಣತೆ.
ಗುರುವೆಂದರೆ ಚಂದ್ರನ ತಂಪು.
ಗುರುವೆಂದರೆ ತಾಪಹಾರಕನೂ ಹೌದು, ಸಂತಾಪಹಾರಕನೂ ಹೌದು.
ಗುರುವಿನ ಹೃದಯ ಸಾಗರದಂತೆ ವಿಶಾಲ.
ಆಳ, ವಿಸ್ತಾರಗಳು ಅಳತೆಗೆ ನಿಲುಕದ್ದು.
ಸಾಗರದಲ್ಲಿ ಅಸಂಖ್ಯ ಅಲೆಗಳು ಉದ್ಭವಿಸಿ ವಿಲೀನಗೊಳ್ಳುತ್ತಿದ್ದರೂ ಕೂಡ ಸಾಗರ ಮಾತ್ರ ನಿರ್ಲಿಪ್ತ. ಅಲ್ಲಿ ಕಿಂಚಿತ್ತೂ ಪ್ರಕ್ಷುಬ್ಧತೆಯಿಲ್ಲ.
ನಮ್ಮ ಬದುಕೆಲ್ಲಾ ಖಂಡ ಖಂಡವಾಗಿದೆ, ತುಂಡಾಗಿದೆ. ನೂರು ಚೂರಾದ ನಮ್ಮ ಬದುಕು ಮತ್ತೆ ಪೂರ್ಣವಾಗಬೇಕು, ಪೂರ್ಣತೆ ನಮ್ಮೆಲ್ಲರ ಬದುಕಿನಲ್ಲಿ ಬರಬೇಕು. ಹಾಗಾಗಿ ಪೂರ್ಣಚಂದ್ರನ ದಿನ, ಪೂರ್ಣವಾದ ನಿಂಬೆಹಣ್ಣು, ಅಕ್ಷತೆಗಳು, ಅಲ್ಲಿ ಪೂರ್ಣರನ್ನು ಆಹ್ವಾನಿಸಿ ಪೂಜಿಸಬೇಕು.
ಗುರುಪೂರ್ಣಿಮೆಯ ದಿನ:
ಜಗದ್ಗುರು ಶ್ರಿಕೃಷ್ಣ ಹಾಗೂ ಅವನ ನಾಲ್ಕು ರೂಪಗಳು;
ವೇದವ್ಯಾಸರು ಮತ್ತವರ ನಾಲ್ವರು ಶಿಷ್ಯರು;
ಸನಕ, ಸನಂದನ, ಸನಾತನ, ಸನತ್ ಸುಜಾಯ, ಸನತ್ ಕುಮಾರರಿಗೆ;
ಶಂಕರ ಭಗತ್ಪಾದರು ಮತ್ತವರ ನಾಲ್ವರು ಶಿಷ್ಯರು;
ಗುರು, ಪರಮಗುರು, ಪರಮೇಷ್ಠಿ ಗುರು, ಪರಾತ್ಪರ ಗುರು, ಹೀಗೆ ಗುರುವು ಗುರುಮಂಡಲವನ್ನೇ ಪೂಜಿಸುವ ದಿನ.
ಗುರುಪೂರ್ಣಿಮೆಯ ದಿನ ಪೂರ್ಣವಾದ ತಂಡುಲ, ನಿಂಬೆಹಣ್ಣುಗಳಲ್ಲಿ ದೇವಾನುದೇವತೆಗಳನ್ನು ಆಹ್ವಾನಿಸಲಾಗುತ್ತದೆ. ಬ್ರಹ್ಮಾಂಡದ ಮೂಲೆಮೂಲೆಯಿಂದ, ಅನಂತದಂಚಿನಿಂದ ವ್ಯಾಸಪೂಜೆಯ ನೆಲೆಗೆ ಬಂದ ದೇವತೆಗಳಿಗೆ ಅರ್ಘ್ಯ, ಪಾದ್ಯ, ಆಚಮನೀಯಗಳನ್ನು ನೀಡಿ ಸಾವಿರ ಸಾವಿರ ಬಾರಿ ಭಗವತ್ಶಕ್ತಿಗಳಿಗೆ ಹೂವು,ತುಳಸಿಯನ್ನು ಸಮರ್ಪಿಸಿ ಪೂಜಿಸಲಾಗುತ್ತದೆ.
ಜುಲೈ ತಿಂಗಳಿನಲ್ಲಿ ಈ ರಾಶಿಯವರಿಗೆ ರಾಜಯೋಗ, ಧನಲಾಭ
ಪರಮಪೂಜ್ಯ ಗುರುವರ್ಯರು ಭಗವಂತನಲ್ಲಿ ಸಕಲ ಜೀವರಾಶಿಗಳ ಹಿತವನ್ನು ಸಂಪ್ರಾರ್ಥಿಸಿ ಸಮಸ್ತ ಲೋಕಕಲ್ಯಾಣಾರ್ಥವಾಗಿ ಆಷಾಢ ಶುಕ್ಲ ಪೂರ್ಣಿಮೆಯಂದು ಮಹಾಮಂಗಲಕರವಾದ ಚಾತುರ್ಮಾಸ್ಯ ವ್ರತದ ದೀಕ್ಷೆಯನ್ನು ಕೈಗೊಳ್ಳುತ್ತಾರೆ.
ಅಪೂರ್ಣವಾದ ನಮ್ಮ ಬದುಕನ್ನು ಪೂರ್ಣಗೊಳಿಸಿಕೊಡಬೇಕೆಂಬ ಭಾವದಲ್ಲಿ ಗುರುವಿಗೆ ಫಲ ಸಮರ್ಪಣೆ ಮಾಡಲಾಗುತ್ತದೆ.ಬದುಕಿನ ಪೂರ್ಣತೆಯನ್ನು ಬಯಸಿ ಬಂದ ಶಿಷ್ಯರಿಗೆ ಪೂಜ್ಯ ಗುರುಗಳು ಅಮೃತ ಸಮನಾದ ತೀರ್ಥವನ್ನು ಅನುಗ್ರಹಿಸುತ್ತಾರೆ. ಗುರುಪೂರ್ಣಿಮೆಯಂದು ಅನುಗ್ರಹಿಸುವ ವ್ಯಾಸಮಂತ್ರಾಕ್ಷತೆಗೆ ವಿಶೇಷ ಶಕ್ತಿಯಿದೆ.
ಗುರುವೆಂದರೆ ನೂರಾಗಿ ಸಾವಿರವಾಗಿ ಹಿಂದಕ್ಕೆ ಕೊಡುವವನು. ಪಾಪವನ್ನೂ, ಅಶುಭವನ್ನೂ ತಾನು ಜೀರ್ಣ ಮಾಡಿಕೊಂಡು, ಒಳಿತನ್ನೂ, ಶುಭವನ್ನೂ ನೂರು-ಸಾವಿರ-ಲಕ್ಷ ಪಾಲಾಗಿ ಹೆಚ್ಚಿಸಿ ನಮ್ಮ ಬದುಕನ್ನು ಸಮೃದ್ಧಗೊಳಿಸಿ ಸಂಪನ್ನಗೊಳಿಸುತ್ತಾನೆ.
ಘನ ಮೇಘವು ತಂಪು ಗಾಳಿಗೆ ದ್ರವವಾಗಿ ಹರಿದು ಇಳೆಯ ಕೊಳೆಯ ತೊಳೆವಂತೆ, ಗುರುಕರುಣೆಯು ಭಾವ~ಮರುತಕ್ಕೆ ದ್ರವಿಸಿ ಶಿಷ್ಯನ ಜನ್ಮಾಂತರದ ದೋಷಗಳನ್ನು ಕಳೆದು ಪೂರ್ಣಸಂಸ್ಕಾರದಿಂದ ಶಿಷ್ಯನನ್ನು ಬೆಳಗಿಸುತ್ತದೆ.
ಗಾಢಾಂಧಕಾರದಲ್ಲಿ ಮುಳುಗಿದ್ದ ಬದುಕಿನ ಪಥಕ್ಕೆ ಬೆಳಕು ಚೆಲ್ಲಿ, ರುಜು ಮಾರ್ಗವ ತೋರಿ, ಪರಮಪುರುಷನಲ್ಲಿ, ಪೂರ್ಣತೆಯಲ್ಲಿ ಲೀನವಾಗಿಸುವವನು ಗುರು.