
- ಕಲ್ಪವೃಕ್ಷದ ಪ್ರತಿಯೊಂದು ಭಾಗವೂ ಆರ್ಥಿಕವಾಗಿ ಲಾಭದಾಯಕ
- ತೆಂಗು ಬೆಳೆಗಾರರ ಮೊಗದಲ್ಲಿ ಸಂತಸ, ಆದಾಯದಲ್ಲಿ ಹೆಚ್ಚಳ
- ತೆಂಗಿನ ಖಾಲಿ ಚಿಪ್ಪಿಗೆ ಟನ್ಗೆ ₹34,000 ಬೆಲೆ!
ಸದಾ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರಾಜ್ಯದ ತೆಂಗು ಬೆಳೆಗಾರರಿಗೆ ಇದೀಗ ಶುಕ್ರದೆಸೆ ಬಂದಿದೆ! ಕೊಬ್ಬರಿ ಮತ್ತು ತೆಂಗಿನಕಾಯಿ ಬೆಲೆಗಳು ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಕಲ್ಪವೃಕ್ಷದ ಪ್ರತಿಯೊಂದು ಭಾಗವೂ ಪ್ರಯೋಜನಕಾರಿ ಎಂಬುದನ್ನು ಈ ಬೆಲೆ ಏರಿಕೆ ಮತ್ತೊಮ್ಮೆ ಸಾಬೀತುಪಡಿಸಿದೆ. ಅಚ್ಚರಿ ಎಂದರೆ, ಈ ಬಾರಿಯ ಮಾರುಕಟ್ಟೆಯಲ್ಲಿ ತೆಂಗಿನ ಖಾಲಿ ಚಿಪ್ಪಿಗೂ ಭಾರಿ ಬೇಡಿಕೆ ಬಂದಿದ್ದು, ರೈತರಿಗೆ ಡಬಲ್ ಖುಷಿ ತಂದಿದೆ!
ರಾಜ್ಯದ ಪ್ರಸಿದ್ಧ ತಿಪಟೂರು ಕೊಬ್ಬರಿ ಮಾರುಕಟ್ಟೆಯಲ್ಲಿ ಕಳೆದ ಎರಡು ತಿಂಗಳಿನಿಂದ ಕೊಬ್ಬರಿ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ಪ್ರತಿ ಕ್ವಿಂಟಾಲ್ ಕೊಬ್ಬರಿ ಬೆಲೆ ಬರೋಬ್ಬರಿ ₹11,000 ಏರಿಕೆಯಾಗಿದೆ! ತಿಪಟೂರು ಎಪಿಎಂಸಿಯಲ್ಲಿ ಜೂನ್ 26ರ ಗುರುವಾರ ನಡೆದ ಹರಾಜಿನಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ₹29,118ಕ್ಕೆ ಏರಿಕೆ ಕಂಡಿರುವುದು ವಿಶೇಷ. ಕೇವಲ ಮೂರು ದಿನಗಳ ಅಂತರದಲ್ಲಿ (ಸೋಮವಾರದಿಂದ ಗುರುವಾರದವರೆಗೆ) ಕ್ವಿಂಟಾಲ್ ಕೊಬ್ಬರಿ ಬೆಲೆ ₹3,000 ಏರಿಕೆಯಾಗಿದೆ.
ಈ ಹಿಂದೆ, ರೈತರು ಕೊಬ್ಬರಿಗೆ ಪ್ರತಿ ಕ್ವಿಂಟಾಲ್ಗೆ ₹15,000 ಬೆಂಬಲ ಬೆಲೆ ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ, ಈಗ ಅದರ ದುಪ್ಪಟ್ಟು ಬೆಲೆಗೆ ಕೊಬ್ಬರಿ ತಲುಪಿದ್ದು, ರೈತರ ಬೇಡಿಕೆಗಿಂತಲೂ ಹೆಚ್ಚಿನ ಆದಾಯ ಲಭಿಸುತ್ತಿದೆ. ಜೂನ್ 27ರಂದು ಅರಸೀಕೆರೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ₹30,000 ತಲುಪಿರುವುದು ತೆಂಗು ಬೆಳೆಗಾರರಿಗೆ ಇನ್ನಷ್ಟು ಉತ್ಸಾಹ ತುಂಬಿದೆ.
ಕೊಬ್ಬರಿ ಬೆಲೆ ಏರಿಕೆಗೆ ಕಾರಣಗಳೇನು?
- ಉತ್ತರ ಭಾರತದಿಂದ ಬೇಡಿಕೆ ಹೆಚ್ಚಳ: ಉತ್ತರ ಭಾರತದ ಮಾರುಕಟ್ಟೆಗಳಿಂದ ಕೊಬ್ಬರಿಗೆ ಬೇಡಿಕೆ ಹೆಚ್ಚಾಗಿರುವುದು ಪ್ರಮುಖ ಕಾರಣ.
- ರಾಜ್ಯದಲ್ಲಿ ಇಳುವರಿ ಇಳಿಕೆ: ಈ ವರ್ಷ ರಾಜ್ಯದಲ್ಲಿ ಕೊಬ್ಬರಿಯ ಇಳುವರಿ ಕಡಿಮೆಯಾಗಿರುವುದು ಸಹಜವಾಗಿಯೇ ಬೆಲೆ ಏರಿಕೆಗೆ ಕಾರಣವಾಗಿದೆ.
- ಇತರೆ ರಾಜ್ಯಗಳಿಗೆ ಪೂರೈಕೆ: ರಾಜ್ಯದ ಉತ್ತಮ ಗುಣಮಟ್ಟದ ಕೊಬ್ಬರಿಯು ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೂ ಹೆಚ್ಚಾಗಿ ಪೂರೈಕೆಯಾಗುತ್ತಿದೆ.
- ಸೆಕೆಂಡ್ಸ್ ದಂಧೆಗೆ ಕಡಿವಾಣ: ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ‘ಸೆಕೆಂಡ್ಸ್ ದಂಧೆ’ಗೆ ಕಡಿವಾಣ ಬಿದ್ದಿರುವುದು ಕೂಡ ಬೆಲೆ ಸ್ಥಿರೀಕರಣಕ್ಕೆ ಮತ್ತು ಏರಿಕೆಗೆ ಸಹಕಾರಿಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
- ಮದುವೆ ಸೀಸನ್: ಮದುವೆಯಂತಹ ಶುಭ ಸಮಾರಂಭಗಳಲ್ಲಿ ಫಲತಾಂಬೂಲವಾಗಿ ತೆಂಗು ನೀಡುವ ಪದ್ಧತಿಯು ಇದಕ್ಕೆ ಪೂರಕವಾಗಿದೆ.
ತೆಂಗಿನ ಕಾಯಿಯ ಖಾಲಿ ಚಿಪ್ಪಿಗೂ ಬಂಗಾರದ ಬೆಲೆ: ಟನ್ಗೆ ₹34,000!
ತೆಂಗಿನ ಎಲ್ಲ ಉತ್ಪನ್ನಗಳು ಒಂದಲ್ಲ ಒಂದು ರೀತಿಯಲ್ಲಿ ಜನರಿಗೆ ಉಪಯೋಗಕ್ಕೆ ಬರುತ್ತವೆ ಎಂಬುದಕ್ಕೆ ಮತ್ತೊಂದು ಉದಾಹರಣೆ ತೆಂಗಿನ ಖಾಲಿ ಚಿಪ್ಪು! ಒಂದು ಕಾಲದಲ್ಲಿ ‘ಚಿಕ್ಕನಾಯಕನಹಳ್ಳಿ ಚಿಪ್ಪು ಏನೂ ಸಿಗಲಿಲ್ಲ ಅಂದ್ರೆ ಸಿಗುತ್ತೆ’ ಅಂತ ವ್ಯಂಗ್ಯವಾಡುತ್ತಿದ್ದ ಜನರು ಈಗ ಹುಬ್ಬೇರಿಸುವಂತೆ ಆಗಿದೆ. ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಕೆ.ಬಿ.ಕ್ರಾಸ್ನಲ್ಲಿ ತೆಂಗಿನ ಖಾಲಿ ಚಿಪ್ಪು ಟನ್ಗೆ ಬರೋಬ್ಬರಿ ₹34,000ಕ್ಕೆ ಮಾರಾಟವಾಗುತ್ತಿದೆ!
ಚಿಕ್ಕನಾಯಕನಹಳ್ಳಿಯ ರೈತ ರವಿ ಎಂಬುವವರು ತೆಂಗಿನ ಚಿಪ್ಪನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಿ ವಿದೇಶಕ್ಕೆ ರಫ್ತು ಕೂಡ ಮಾಡುತ್ತಿದ್ದಾರೆ. ಆನ್ಲೈನ್ ವೇದಿಕೆಗಳಲ್ಲಿ ಒಂದೇ ತೆಂಗಿನಕಾಯಿ ಖಾಲಿ ಚಿಪ್ಪು ಕೆಲವೊಮ್ಮೆ ₹100-200ಕ್ಕೆ ಮಾರಾಟವಾದ ಉದಾಹರಣೆಗಳೂ ಇವೆ. ಕೊಬ್ಬರಿ ಬೆಲೆ ಏರಿಕೆಯ ಜೊತೆಗೆ ತೆಂಗಿನ ಖಾಲಿ ಚಿಪ್ಪಿಗೂ ಇಷ್ಟೊಂದು ಬೆಲೆ ಸಿಗುತ್ತಿರುವುದು ತೆಂಗು ಬೆಳೆಗಾರರ ಪಾಲಿಗೆ ‘ಕಲ್ಪವೃಕ್ಷ’ ನಿಜಕ್ಕೂ ಕಲ್ಪವೃಕ್ಷವಾಗಿದೆ ಎಂಬುದನ್ನು ಸಾರುತ್ತಿದೆ. ಕೊಬ್ಬರಿ ಬೆಲೆ ಏರಿಕೆಯಿಂದ ಕೊಬ್ಬರಿ ಎಣ್ಣೆಯ ಬೆಲೆಯೂ ಏರುಮುಖದಲ್ಲಿದೆ.
Abhishek is an accomplished journalist with four years of experience in the media industry. He possesses extensive expertise in news collection, reporting, interviewing, and analyzing diverse contemporary issues, crafting engaging and informative content.