
ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಉಜಿರೆಯಲ್ಲಿ ನಡೆದ ಶ್ರೀರಾಮೋತ್ಸವದಲ್ಲಿ ಮಾತನಾಡುತ್ತಾ, ಹಿಂದೂ ಸಮಾಜದ ವಿಸ್ತರಣೆಯ ಅಗತ್ಯವನ್ನು ಪ್ರತಿಪಾದಿಸಿದರು. ಇದಕ್ಕಾಗಿ ಸರ್ಕಾರವೇ ಜಾರಿಗೊಳಿಸಿರುವ ಮತಾಂತರ ನಿಷೇಧ ಕಾನೂನನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಅವರು ಕರೆ ನೀಡಿದರು.
ಧರ್ಮಕ್ಕೆ ಆಘಾತವಾದಾಗ ಮೌನವಾಗಿರುವವರು ಧರ್ಮದ್ರೋಹಿಗಳಾಗುತ್ತಾರೆ ಎಂದ ಅವರು, ದುಷ್ಟ ಶಕ್ತಿಗಳ ವಿರುದ್ಧ ಹನುಮಂತನಂತೆ ಬಲವಾಗಿ ನಿಲ್ಲುವ ಅವಶ್ಯಕತೆಯನ್ನು ಒತ್ತಿ ಹೇಳಿದರು. ಸನಾತನ ಧರ್ಮವು ಕೇವಲ ಪ್ರಾಚೀನವಾದದ್ದಲ್ಲ, ಬದಲಾಗಿ ಜಗತ್ತಿನ ಅತ್ಯಂತ ಹಳೆಯ ಮತ್ತು ಇಂದಿನವರೆಗೂ ಜೀವಂತವಾಗಿರುವ ಏಕೈಕ ಧರ್ಮವಾಗಿದೆ. ಆದ್ದರಿಂದ, ಹಿಂದೂ ಧರ್ಮದ ವಿರುದ್ಧ ಯಾರೇ ಬಂದರೂ ಅವರಿಗೆ ಉತ್ತರಿಸಲು ಸದಾ ಸಿದ್ಧರಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಬಿಂದು ಬಿಂದು ಸೇರಿದರೆ ಸಾಗರವಾದಂತೆ, ಹಿಂದೂಗಳೆಲ್ಲರೂ ಒಗ್ಗೂಡಿ ಸವಾಲುಗಳನ್ನು ಎದುರಿಸಬೇಕಾದ ಸಮಯ ಬಂದಿದೆ ಎಂದು ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದರು. ಬಂಗಾಳದ ಗೋಪಾಲ್ ಮುಖರ್ಜಿಯವರ ಆದರ್ಶವನ್ನು ಅನುಸರಿಸುವ ಸಂದರ್ಭ ಇದೀಗ ಒದಗಿ ಬಂದಿದೆ ಎಂದರು. ಗಂಗೆ ಮತ್ತು ಸರಯೂ ನದಿಗಳು ಸ್ವಚ್ಛವಾದಾಗ ಕಾಶಿಯಲ್ಲಿ ವಿಶ್ವನಾಥನ ಮಂದಿರ ಮತ್ತು ಅಯೋಧ್ಯೆಯಲ್ಲಿ ರಾಮನ ಮಂದಿರವು ಭವ್ಯವಾಗಿ ಎದ್ದು ನಿಂತಿತು. ಅದೇ ರೀತಿ ಯಮುನಾ ನದಿಯು ಸ್ವಚ್ಛವಾಗುವ ಕಾಲ ಬರಲಿದ್ದು, ಆಗ ಕೃಷ್ಣನ ಭವ್ಯ ಮಂದಿರವನ್ನು ನೋಡುವ ಭಾಗ್ಯ ನಮಗೆಲ್ಲಾ ಲಭಿಸಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಾಂಗ್ಲಾ ಮತಾಂಧರ ಅಟ್ಟಹಾಸಕ್ಕೆ ಹಿಂದೂ ನಾಯಕನ ಭೀಕರ ಹತ್ಯೆ!
ಹಿಂದೂಗಳ ಸಂಖ್ಯೆ ಕ್ಷೀಣಿಸಿದರೆ ದೇಶದ ಮೂಲಭೂತ ತತ್ವವೇ ನಾಶವಾಗುತ್ತದೆ. ಆದ್ದರಿಂದ, ಹಿಂದೂಗಳ ಸಂಖ್ಯೆಯನ್ನು ಮತ್ತು ಹಿಂದೂ ಸಮಾಜವನ್ನು ವಿಸ್ತರಿಸಲು ಸರ್ಕಾರ ನೀಡಿರುವ ಮತಾಂತರ ನಿಷೇಧ ಕಾನೂನನ್ನು ಒಂದು ಪರಿಣಾಮಕಾರಿ ಅಸ್ತ್ರವಾಗಿ ಬಳಸಿಕೊಳ್ಳೋಣ ಎಂದು ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದರು.
ಸಮಾಜದ ವಿವಿಧ ಜಾತಿಗಳ ಸ್ವಾಮೀಜಿಗಳು ಮತ್ತು ಮುಖಂಡರು ಹಿಂದೂ ಧರ್ಮದ ಮಹತ್ವ ಮತ್ತು ವೈಶಿಷ್ಟ್ಯಗಳನ್ನು ಮನವರಿಕೆ ಮಾಡುವ ಮೂಲಕ ಇತರರನ್ನು ನಮ್ಮೊಂದಿಗೆ ಸೇರಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಅದಕ್ಕಾಗಿ ನಮ್ಮ ಹೃದಯ ವೈಶಾಲ್ಯತೆ ಹೊಂದಿರಬೇಕು ಎಂದು ಅವರು ಹೇಳಿದರು. ಅಲ್ಲದೆ, ಬಜರಂಗದಳದ ಈ ಯೋಜನೆಯನ್ನು ಪ್ರತಿಯೊಬ್ಬರೂ ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.
ನಮ್ಮ ಜನರು ಕೇವಲ ಜನಸಂಖ್ಯೆ ಹೆಚ್ಚಿಸುವುದಕ್ಕಾಗಿ ಎರಡು ಮೂರು ಮಕ್ಕಳನ್ನು ಹೆರುವುದಿಲ್ಲ. ಅವರಿಗೆ ತಮ್ಮ ಮಕ್ಕಳು ಪಂಚರ್ ಹಾಕುವ ಕೆಲಸ ಮಾಡುವುದರಲ್ಲಿ ಆಸಕ್ತಿ ಇಲ್ಲ. ಬದಲಾಗಿ, ತಮ್ಮ ಮಕ್ಕಳು ಚೆನ್ನಾಗಿ ಓದಿ ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕೆಂದು ಬಯಸುತ್ತಾರೆ. ಆದರೆ, ಎಲ್ಲರಿಗೂ ಅಷ್ಟು ಮಕ್ಕಳನ್ನು ಓದಿಸುವ ಆರ್ಥಿಕ ಸಾಮರ್ಥ್ಯ ಇರುವುದಿಲ್ಲ. ಹಾಗಾಗಿ ಅನೇಕರು ಒಂದು ಅಥವಾ ಇಬ್ಬರು ಮಕ್ಕಳಿಗಷ್ಟೇ ಸೀಮಿತವಾಗುತ್ತಾರೆ. ಆದ್ದರಿಂದ, ಕೇವಲ ಮಕ್ಕಳನ್ನು ಹೆರುವ ಮೂಲಕ ಧರ್ಮವನ್ನು ವಿಸ್ತರಿಸಲು ಸಾಧ್ಯವಿಲ್ಲ.
ಸರ್ಕಾರ ನಮಗಾಗಿ ಮಾಡಿರುವ ಮತಾಂತರ ನಿಷೇಧ ಕಾನೂನನ್ನು ನಾವು ಸಮರ್ಥವಾಗಿ ಬಳಸಿಕೊಳ್ಳಬೇಕು. ಪೊಲೀಸರಿಗೂ ನಾನು ಹೇಳುತ್ತಿದ್ದೇನೆ, ಇದು ನಾವು ಹೇಳುತ್ತಿರುವುದಲ್ಲ, ಸರ್ಕಾರವೇ ನೀಡಿರುವ ಕಾನೂನು. ಬಿಜೆಪಿ ಸರ್ಕಾರವಿದ್ದಾಗ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತು. ಈಗ ಹೊಸ ಸರ್ಕಾರ ಬಂದ ನಂತರ ಆ ಕಾನೂನನ್ನು ತೆಗೆದುಹಾಕಿದೆ. ಇದರರ್ಥವೇನು? ಸರ್ಕಾರವೇ ಮತಾಂತರ ಮಾಡಬಹುದು ಎಂದು ಧೈರ್ಯವಾಗಿ ಹೇಳಿದೆ ಎಂದಾಯಿತಲ್ಲವೇ? ಹಾಗಿದ್ದಾಗ ನಾವು ಅದನ್ನು ಬಳಸಿಕೊಳ್ಳಬೇಕಲ್ಲವೇ? ಎಂದು ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.
ಜಗತ್ತಿನ ಯಾವುದೇ ರಾಷ್ಟ್ರದಲ್ಲೂ ಇಂತಹ ಪರಿಸ್ಥಿತಿ ಇಲ್ಲ. ಸರ್ಕಾರವೇ ಅಧಿಕೃತವಾಗಿ ಮತಾಂತರ ಮಾಡಲು ಹೇಳಿರುವಾಗ ನಿಮಗೆ ಕಷ್ಟವೇನು? ಮತಾಂತರ ಮಾಡುವುದು ಕಷ್ಟವೇನಲ್ಲ. “ನಾನು ಜಗತ್ತಿನ ಅತ್ಯಂತ ಶ್ರೇಷ್ಠ ಹಿಂದೂ ಧರ್ಮಕ್ಕೆ ಸೇರಿದವನು” ಎಂದು ಹೆಮ್ಮೆಯಿಂದ ಹೇಳಿಕೊಳ್ಳಿ. ಜಗತ್ತಿನಲ್ಲಿ ಅನೇಕ ಮತ ಪಂಥಗಳಿದ್ದರೂ, ಅವರೆಲ್ಲರಿಗೂ ಒಬ್ಬನೇ ದೇವರು. ಆ ಒಬ್ಬ ದೇವರಿಗೆ ಸಮಸ್ಯೆಯಾದರೆ ಆ ಧರ್ಮವೇ ನಾಶವಾಗುತ್ತದೆ. ಆದರೆ ನಮಗೆ 33 ಕೋಟಿ ದೇವತೆಗಳಿದ್ದಾರೆ.
ನೀವು ರಾಮನನ್ನು ನಿಂದಿಸಿದರೆ ನಾನು ಸೀತೆಯನ್ನು ಆಶ್ರಯಿಸುತ್ತೇನೆ. ನೀವು ಸೀತೆಗೆ ಕಳಂಕ ತರಲು ಪ್ರಯತ್ನಿಸಿದರೆ ಶ್ರೀಕೃಷ್ಣನಿದ್ದಾನೆ. ಕೃಷ್ಣನಿಗೆ ಕಳಂಕ ತರಲು ಪ್ರಯತ್ನಿಸಿದರೆ ನಮಗೆ ಮಂಜುನಾಥ ಸ್ವಾಮಿ ಇದ್ದಾನೆ. ನೀವು ಮಂಜುನಾಥನಿಗೆ ಕಳಂಕ ತರಲು ಪ್ರಯತ್ನಿಸಿದರೆ ನಮ್ಮ ಊರಿನಲ್ಲೊಂದು ದೇವಸ್ಥಾನವಿದೆ, ನಾವು ಎಲ್ಲಿಗಾದರೂ ಹೋಗಬಹುದು. ಹಾಗಾಗಿ ಅವರಿಗೆ ಹೇಳಿ, ಒಂದೇ ದೇವರು ಒಳ್ಳೆಯದೋ ಅಥವಾ 33 ಕೋಟಿ ದೇವರು ಒಳ್ಳೆಯದೋ? ಎಂದು ಚಕ್ರವರ್ತಿ ಸೂಲಿಬೆಲೆ ವಾದಿಸಿದರು.
ಸ್ನೇಹಿತರೇ, ಅವರು ಬಂದು ಹೇಳುತ್ತಾರೆ, “ನಿಮ್ಮಲ್ಲಿ ಬಹಳ ಪುಸ್ತಕಗಳಿವೆ, ನಮ್ಮಲ್ಲಿ ಒಂದೇ ಪುಸ್ತಕ” ಎಂದು. ಆಗ ನೀವು ಅವರಿಗೆ ಹೇಳಿ, “ನಮ್ಮಲ್ಲಿ ಗ್ರಂಥಾಲಯವೇ ಇದೆ. ಯಾವುದೋ ಒಂದು ಪುಸ್ತಕವನ್ನು ಸುಡುವುದರಿಂದ ಹಿಂದೂ ಧರ್ಮ ಸಾಯುವುದಿಲ್ಲ.” ನಿಮ್ಮ ಮತ ಪಂಥಗಳಲ್ಲಿ ಮಹಿಳೆಯರಿಗೆ ಗೌರವವಿಲ್ಲ ಎಂದು ಅವರಿಗೆ ತಿಳಿಸಿ.
ಇಲ್ಲಿರುವ ಮಹಿಳೆಯರಿಗೆ ಮುಖ ಮುಚ್ಚಿಕೊಳ್ಳಿ ಎಂದು ಹೇಳಿಲ್ಲ, ಗಂಡು ಮಕ್ಕಳ ಪಕ್ಕದಲ್ಲಿ ಕೂರಬೇಡಿ ಎಂದು ಹೇಳಿಲ್ಲ. ಬರುವವರಿಗೆ ಸ್ವಾಗತ ಕೋರಿ, ಅವರನ್ನು ಮುಕ್ತ ಮನಸ್ಸಿನಿಂದ ಬರಮಾಡಿಕೊಳ್ಳಿ. ಸಂಖ್ಯೆಯನ್ನು ಹೆಚ್ಚಿಸಲು ಮಕ್ಕಳೇ ಆಗಬೇಕಾಗಿಲ್ಲ, ನಮ್ಮ ಹೃದಯ ಸ್ವಲ್ಪ ದೊಡ್ಡದಾಗಬೇಕು ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಸೇವೆ ಮಾಡುವುದು ಕೇವಲ ನಿಮ್ಮ ಸಮಾಜ ಮಾತ್ರವಲ್ಲ, ನಮ್ಮ ಸಮಾಜವು ಯಾವ ಧರ್ಮ ಮಾಡಿದೆ ಎಂದು ಕೇಳಿ. ಇಂತಹ ಸೇವೆಯನ್ನು ಮಾಡುವ ಸಮಾಜ ಮತ್ತೊಂದಿಲ್ಲ ಎಂದು ಹೇಳಿ ನಮ್ಮ ಸಮಾಜಕ್ಕೆ ಆಹ್ವಾನ ನೀಡಿ. ನಮ್ಮ ಸಮಾಜದ ಎಲ್ಲಾ ಪ್ರಮುಖರು ಈ ಬಗ್ಗೆ ಒಂದು ಘೋಷಣೆಯನ್ನು ಹೊರಡಿಸಲಿ. ಯಾರಾದರೂ ನಮ್ಮ ಧರ್ಮಕ್ಕೆ ಮತಾಂತರವಾಗಲು ಬಯಸಿದರೆ, ನಮ್ಮ ಸಮಾಜ ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತದೆ, ಬನ್ನಿ ಎಂದು ಕರೆಯಿರಿ. ಸಮಾಜದ ಸ್ವಾಮೀಜಿಗಳ ಮೂಲಕ ಈ ಘೋಷಣೆ ಹೊರಡಲಿ, ಯಾರಾದರೂ ಬರಲು ಬಯಸಿದರೆ ಜಾತಿ ಭೇದವಿಲ್ಲದೆ ಅವರನ್ನು ಆಹ್ವಾನಿಸಿ.
ನೀವು ಒಮ್ಮೆ ಮುಕ್ತ ಮನಸ್ಸಿನಿಂದ ಕರೆ ನೀಡಿದರೆ, ಎಷ್ಟು ಜನರು ಸದ್ದಿಲ್ಲದೆ ಸೇರಿಕೊಳ್ಳುತ್ತಾರೆ ನೋಡಿ. ಜನಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರವೇ ನೀಡಿರುವ ಇಂತಹ ಕಾನೂನುಗಳು ನಮ್ಮಲ್ಲಿವೆ. ಆದ್ದರಿಂದ, ಸಂಖ್ಯೆಯನ್ನು ವಿಸ್ತರಿಸಲು ನಾವು ಈ ರೀತಿಯಾಗಿ ಕೆಲಸ ಮಾಡಬೇಕಾಗಿದೆ. ಮುಂದಿನ ಪೀಳಿಗೆಗೆ ಭಾರತವನ್ನು ಬಿಟ್ಟು ಹೋಗುವಾಗ, ಅದಕ್ಕೆ ಸ್ವಲ್ಪ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಗತ್ಯವಿದ್ದರೆ ನೇಪಾಳವನ್ನೂ ಸೇರಿಸೋಣ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಕರೆ ನೀಡಿದರು.