
- ಮಂಗಳೂರಿನ ನೇತ್ರಾವತಿ ನದಿಯ ದಡದಲ್ಲಿರುವ ನೀರಿನ ಟ್ಯಾಂಕ್ನಲ್ಲಿ ಶವ ಪತ್ತೆ
- ಮೊಬೈಲ್, ಬೈಕ್ ಪತ್ತೆಯಾದ ಸ್ಥಳದಲ್ಲೇ ಶವ ಪತ್ತೆ
- ಸಾವಿನ ಸುತ್ತ ಹಲವು ಅನುಮಾನಗಳು, ಪೊಲೀಸರಿಂದ ತೀವ್ರ ತನಿಖೆ
ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಪುತ್ತೂರು ನಗರಸಭೆ ಬಿಜೆಪಿ ಸದಸ್ಯರೊಬ್ಬರ ಮೃತದೇಹ ಪತ್ತೆಯಾಗಿದ್ದು, ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಈ ಘಟನೆ ರಾಜಕೀಯ ವಲಯದಲ್ಲಿ ಮತ್ತು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
ನಾಪತ್ತೆಯಾಗಿದ್ದ ಪುತ್ತೂರು ನಗರಸಭೆಯ ಬಿಜೆಪಿ ಸದಸ್ಯ ರಮೇಶ್ ರೈ ಅವರ ಮೃತದೇಹ ಇಂದು (ಜೂನ್ 5) ಮಂಗಳೂರಿನ ಪಾಣೆ-ಮಂಗಳೂರು ಸೇತುವೆ ಬಳಿಯ ನೇತ್ರಾವತಿ ನದಿಯ ದಡದಲ್ಲಿರುವ ನೀರಿನ ಟ್ಯಾಂಕ್ನಲ್ಲಿ ಪತ್ತೆಯಾಗಿದೆ. ರಮೇಶ್ ರೈ ಅವರು ಮನೆಯಿಂದ ನಾಪತ್ತೆಯಾದ ನಂತರ, ಅವರ ಮೊಬೈಲ್ ಫೋನ್ ಮತ್ತು ಬೈಕ್ ಪಾಣಿ ಮಂಗಳೂರು ಸೇತುವೆಯ ಬಳಿ ಸಿಕ್ಕಿತ್ತು. ಈ ಸುಳಿವು ಆಧರಿಸಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯರು ನದಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ತೀವ್ರ ಹುಡುಕಾಟ ನಡೆಸಿದ್ದರು.
ಹುಡುಕಾಟದ ವೇಳೆ, ರಮೇಶ್ ರೈ ಅವರ ಮೃತದೇಹ ನೇತ್ರಾವತಿ ನದಿಯ ದಡದಲ್ಲಿರುವ ನೀರಿನ ಟ್ಯಾಂಕ್ನಲ್ಲಿ ಪತ್ತೆಯಾಗಿದೆ. ಸಾಮಾನ್ಯವಾಗಿ ಅಂತಹ ಸ್ಥಳದಲ್ಲಿ ಮೃತದೇಹ ಪತ್ತೆಯಾಗುವುದು ಅಪರೂಪ ಎಂಬ ಕಾರಣಕ್ಕೆ ಈ ಸಾವಿನ ಸುತ್ತ ಹಲವು ಪ್ರಶ್ನೆಗಳು ಮೂಡಿವೆ. ಇದು ಕೇವಲ ಒಂದು ಆಕಸ್ಮಿಕವೇ ಅಥವಾ ಇದರ ಹಿಂದೆ ಬೇರೆ ಯಾವುದೇ ಕಾರಣವಿದೆಯೇ ಎಂಬ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.