
- ಬೀದರ್ ರೈತ ದೀಲಿಪ್ ಕುಮಾರ್ 40 ಎಕರೆಯಲ್ಲಿ ಈರುಳ್ಳಿ ಬೀಜ ಬೆಳೆದು 5 ತಿಂಗಳಲ್ಲಿ 1 ಕೋಟಿ ರೂ.ಗೂ ಅಧಿಕ ಲಾಭ
- ಉತ್ತಮ ಗುಣಮಟ್ಟದ ಬೀಜಗಳನ್ನು ನೇರವಾಗಿ ರೈತರಿಗೆ ಮಾರಾಟ ಮಾಡುವುದು ಅವರ ಯಶಸ್ಸಿನ ಗುಟ್ಟು.
- ಸಾಂಪ್ರದಾಯಿಕ ಬೆಳೆಗಳನ್ನು ತೊರೆದು ಪ್ರಯೋಗಾತ್ಮಕ ಕೃಷಿ ಮಾಡಿದ ದೀಲಿಪ್ ಕುಮಾರ್ ಇತರ ರೈತರಿಗೆ ಮಾದರಿಯಾಗಿದ್ದಾರೆ.
ಕೃಷಿ (farming) ಎಂದರೆ ಬರೀ ನಷ್ಟದ ಕತೆ ಎನ್ನುವವರ ನಡುವೆ ಬೀದರ್ ಜಿಲ್ಲೆಯ ರೈತರೊಬ್ಬರು (Farmer) ಕೃಷಿಯಲ್ಲೇ ಕೋಟಿಗಟ್ಟಲೆ ಲಾಭ ಗಳಿಸಿ ಅಚ್ಚರಿ ಮೂಡಿಸಿದ್ದಾರೆ. ಹೌದು, ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ್ ಗ್ರಾಮದ ದೀಲಿಪ್ ಕುಮಾರ್ ನೇಮಿನಾಥ್ ಕಿವುಡೆ ಎಂಬ ರೈತ ಕೇವಲ ಐದು ತಿಂಗಳಲ್ಲಿ ಈರುಳ್ಳಿ ಬೀಜ (Onion Seeds) ಮಾರಾಟ ಮಾಡಿ ಒಂದು ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಸುವ ಮೂಲಕ ಕೃಷಿ ಲಾಭದಾಯಕ ಉದ್ಯಮ ಎಂಬುದನ್ನು ಸಾಬೀತುಪಡಿಸಿದ್ದಾರೆ.
40 ಎಕರೆ ವಿಶಾಲವಾದ ಜಮೀನಿನಲ್ಲಿ ಈರುಳ್ಳಿ (Onion) ಬೀಜೋತ್ಪಾದನೆ ಮಾಡುತ್ತಿರುವ ದೀಲಿಪ್ ಕುಮಾರ್, ಇಡೀ ಕರ್ನಾಟಕದಲ್ಲಿಯೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಈರುಳ್ಳಿ ಬೀಜ ಬೆಳೆಯುವ ಏಕೈಕ ರೈತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರತಿ ವರ್ಷವೂ ಗುಣಮಟ್ಟದ ಈರುಳ್ಳಿ ಬೀಜಗಳನ್ನು ತಯಾರಿಸಿ ನೇರವಾಗಿ ರೈತರಿಗೆ ಮಾರಾಟ ಮಾಡುವ ಮೂಲಕ ಅವರು ಉತ್ತಮ ಲಾಭ ಗಳಿಸುತ್ತಿದ್ದಾರೆ. ಅವರ ಈರುಳ್ಳಿ ಬೀಜದ ಗುಣಮಟ್ಟ ಎಷ್ಟರಮಟ್ಟಿಗೆ ಇದೆ ಎಂದರೆ, ರೈತರು ಇವರ ಬೀಜಗಳನ್ನು ನಂಬಿ ಖರೀದಿಸಿ ನಾಟಿ ಮಾಡಿದರೆ ಉತ್ತಮ ಇಳುವರಿ ಖಚಿತ ಎನ್ನುತ್ತಾರೆ. ಹೀಗಾಗಿಯೇ ರಾಜ್ಯದ ಮೂಲೆ ಮೂಲೆಗಳಿಂದ ರೈತರು ಅವರ ಬಳಿ ಬಂದು ಬೀಜಗಳನ್ನು ಖರೀದಿಸುತ್ತಾರೆ.
ದೀಲಿಪ್ ಕುಮಾರ್ ಅವರು ಒಂದು ಕೆಜಿಯಷ್ಟು ಈರುಳ್ಳಿ ಬೀಜವನ್ನು ಪ್ಯಾಕ್ ಮಾಡಿ ರಾಜ್ಯಾದ್ಯಂತ ಮಾರಾಟ ಮಾಡುತ್ತಾರೆ. ಅಷ್ಟೇ ಅಲ್ಲದೆ, ಪಕ್ಕದ ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ರೈತರೂ ಅವರ ಗ್ರಾಹಕರಾಗಿದ್ದಾರೆ. ಕೆಜಿಗೆ ಸುಮಾರು ಒಂದು ಸಾವಿರ ರೂಪಾಯಿವರೆಗೆ ಮಾರಾಟವಾಗುವ ಈ ಬೀಜಗಳಿಂದ ಅವರಿಗೆ ಉತ್ತಮ ಲಾಭ ದೊರೆಯುತ್ತಿದೆ ಎಂದು ಸ್ವತಃ ದೀಲಿಪ್ ಕುಮಾರ್ ಹೇಳುತ್ತಾರೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಯಾವುದೇ ಕಾರಣಕ್ಕೂ ಮೊಟ್ಟೆ ತಿನ್ನಬೇಡಿ!
ಸಾಂಪ್ರದಾಯಿಕ ಬೆಳೆಗಳಿಗೆ ವಿದಾಯ, ಈರುಳ್ಳಿ ಬೀಜಕ್ಕೆ ಜೈ:
ಸುಮಾರು 15 ವರ್ಷಗಳ ಹಿಂದೆ ದೀಲಿಪ್ ಕುಮಾರ್ ಅವರ ಜಮೀನಿನಲ್ಲಿ ಕಬ್ಬು, ಸೋಯಾ, ಉದ್ದು ಮತ್ತು ಹೆಸರು ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ಆದರೆ, ಈ ಬೆಳೆಗಳಿಂದ ಅವರಿಗೆ ನಿರೀಕ್ಷಿತ ಲಾಭ ಸಿಗಲಿಲ್ಲ. ಕಬ್ಬು ಬೆಳೆಯಿಂದಲೂ ಅಷ್ಟೇನೂ ಆದಾಯವಿರಲಿಲ್ಲ. ಇದರಿಂದ ಬೇಸತ್ತ ದೀಲಿಪ್ ಕುಮಾರ್ ಕೃಷಿಯಲ್ಲಿ ಏನಾದರೂ ಹೊಸತು ಮಾಡಬೇಕೆಂದು ನಿರ್ಧರಿಸಿದರು. ಆಗ ಹೊಳೆದದ್ದೇ ಈರುಳ್ಳಿ ಬೀಜೋತ್ಪಾದನೆಯ ಯೋಚನೆ.
ಮೊದಲಿಗೆ ಕೇವಲ 10 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೀಜವನ್ನು ಬೆಳೆದ ಅವರು, ಪ್ರತಿ ಕ್ವಿಂಟಲ್ಗೆ 50 ಸಾವಿರ ರೂಪಾಯಿಯಂತೆ ಮಾರಾಟ ಮಾಡಿ ಭರ್ಜರಿ ಲಾಭ ಗಳಿಸಿದರು. ಅವರ ಉತ್ತಮ ಗುಣಮಟ್ಟದ ಬೀಜಗಳನ್ನು ನೋಡಿದ ಇತರ ರೈತರು ಅವರಿಂದ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಪ್ರಾರಂಭಿಸಿದರು. ಹೀಗಾಗಿ, 10 ಎಕರೆಯಲ್ಲಿ ಆರಂಭವಾದ ಅವರ ಈರುಳ್ಳಿ ಬೀಜೋತ್ಪಾದನೆ ಈಗ 40 ಎಕರೆಗೆ ವಿಸ್ತರಿಸಿದೆ. ಅವರು ವರ್ಷಕ್ಕೆ ಕನಿಷ್ಠ 200 ಕ್ವಿಂಟಾಲ್ ಈರುಳ್ಳಿ ಬೀಜವನ್ನು ಮಾರಾಟ ಮಾಡುತ್ತಾರೆ.
ವಿಶೇಷವೆಂದರೆ, ದೀಲಿಪ್ ಕುಮಾರ್ ಯಾವುದೇ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ. ತಾವೇ ಬೆಳೆದ ಬೀಜವನ್ನು ತಾವೇ ನೇರವಾಗಿ ಮಾರಾಟ ಮಾಡುವುದರಿಂದ ಮಾರುಕಟ್ಟೆಯ ದರ ಏರಿಳಿತಗಳ ಪರಿಣಾಮ ಅವರ ಮೇಲೆ ಬೀರುವುದಿಲ್ಲ. ಈ ಯಶಸ್ಸಿನಿಂದಾಗಿ ದೀಲಿಪ್ ಕುಮಾರ್ ಕೃಷಿಯಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ. 40 ಎಕರೆಯಲ್ಲಿನ ಎಲ್ಲಾ ಖರ್ಚುಗಳನ್ನು ತೆಗೆದರೂ ಅವರಿಗೆ ಐದು ತಿಂಗಳಲ್ಲಿ 60 ರಿಂದ 70 ಲಕ್ಷ ರೂಪಾಯಿಗಳ ಲಾಭ ಸಿಗುತ್ತದೆ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.
ಇದನ್ನೂ ಓದಿ: ಪ್ರಿಯಕರನ ಬೆರಳನ್ನೇ ಕತ್ತರಿಸಿ ಫ್ರಿಜ್ ನಲ್ಲಿ ಇಟ್ಟ ಯುವತಿ!
ಒಟ್ಟಾರೆಯಾಗಿ, ರೈತ ದೀಲಿಪ್ ಕುಮಾರ್ ಅವರ ಈರುಳ್ಳಿ ಬೀಜೋತ್ಪಾದನೆಯ ಕೃಷಿ ನಿಜಕ್ಕೂ ಯಶಸ್ಸಿನ ಕಥೆ. ಎಲ್ಲಾ ರೈತರು ಪ್ರಯೋಗಾತ್ಮಕ ಕೃಷಿಗೆ ಮುಂದಾಗಬೇಕು ಮತ್ತು ತೋಟಗಾರಿಕೆ ಇಲಾಖೆಯ ಸಹಾಯ ಪಡೆದು ಉತ್ತಮ ಆದಾಯ ತರುವ ಬೆಳೆಗಳನ್ನು ಬೆಳೆಯುವ ಮೂಲಕ ಯಶಸ್ಸು ಸಾಧಿಸಬೇಕು ಎಂಬುದು ಅವರ ಆಶಯ.